ಕನಸು ಕಾಣುತಿದೆ ಈ ಮನಸು
ಹೊಸ ಕನಸು ಕಾಣುತಿದೆ,
ಪಾತಾಳದಿಂದ ನಭಕ್ಕೆ ನೆಗೆವ ಮನಸು
ನನಸಾಗಲಾರದ ಕನಸು ಕಾಣುತಿದೆ.
ವಿಶ್ರಾಂತಿಗೆಂದು ಮುಚ್ಚಿದರೆ ಕಣ್ಣು
ಅಶಾಂತಿಯ ಪ್ರವಾಹವನೆಬ್ಬಿಸಿದೆ,
ಕನಸಿನ ಆರ್ಭಟದ ಗುಡುಗು-ಸಿಡಿಲಿಗೆ
ಹೌ ಹಾರಿ ಹಾಕಿರುವೆನು ನಿದ್ದೆಗೆ ಹಿಡಿ ಮಣ್ಣು.
ಮೂಡುತಿದೆ ಸ್ಮೃತಿ ಪಟಲದ ಮೇಲೆ
ಕನಸಿನ ನಾನಾ ದೃಶ್ಯಾವಳಿಗಳ ಲೀಲೆ,
‘ಭ್ರಮೆ’ ಎಂದು ಬಿಟ್ಟು ಕುಳಿತರೆ ಹಾಗೆ
ನನಸಾಗುವುದು ಮನಸಿನ ಕನಸು ಹೇಗೆ ?
ಕನಸದೋ ನೋಡು…
ಒಂದು ರಾಜ್ಯ*
ಅಲ್ಲಿ ಪ್ರಭುಗಳಿಲ್ಲ,
ಪ್ರಜೆಗಳೇ ಎಲ್ಲ
ಪ್ರಜೆಗಳದೇ ಎಲ್ಲ.
ಅವರಲ್ಲಿ,
‘ಪ್ರಭು’ ಎನಿಸಿಕೊಳ್ಳುವವನ
ಅವಶ್ಯಕತೆಯೆ ಇಲ್ಲ-
ಅಂಥದ್ದು ಆ ನನ್ನ ರಾಜ್ಯ.
ಆ ಜನರಲ್ಲಿ,
“ಬೇರೆ” ಎಂಬುದರ ಅರ್ಥ ತಿಳಿಯದು
“ಒಂದೇ” ಎಂಬುದಕ್ಕೆ ಒಮ್ಮತ ಬಾರದಿರದು;
‘ನನ್ನದು’ , ‘ನಿನ್ನದು’ಗಳ ಬದಲಾಗಿ
“ನಮ್ಮದು” ಎಂಬುದಿದೆ ಬಲವಾಗಿ;
ಸಂಕುಚಿತವನರಿಯದ ಹೃದಯ ವೈಶಾಲ್ಯರು.
ಹಾಗಾಗಿ ಅಲ್ಲಿ,
ಗಡಿ-ಭಾಷೆಗಳ ತಂಟೆ-ತಕರಾರುಗಳಿಲ್ಲ,
ಆಚಾರ-ವಿಚಾರ, ಪದ್ಧತಿ-ಸಂಪ್ರದಾಯಗಳ
ಆಡಂಬರದ ಅನಾಗರೀಕತೆಗಳಿಲ್ಲ.
ಅವರಿಗೆ “ಪ್ರತ್ಯೇಕತೆ”ಯ ಅರ್ಥ ತಿಳಿದಿಲ್ಲ
ಯಾರೊಬ್ಬರೂ “ಏಕತೆ”ಯನು ಮರೆತಿಲ್ಲ;
ಅದಕ್ಕೆ ಅವರು ಪಾಲು ಕೇಳಿಲ್ಲ- ಕೇಳೊಲ್ಲ.
ಅವರಲ್ಲಿ ಅತಿಯಾದ ‘ಆಸೆ-ಅಪೇಕ್ಷೆ’ಗಳಿಲ್ಲ
ಯಾಕೆಂಬುದನೂ ಬಲ್ಲರವರು –
“ಅತಿಯಾಸೆ ಆಸೆ ಗತಿಗೆಡು, ಅತೀ ಅಪೇಕ್ಷೆ ಮತಿಗೇಡು” ಎಂದು.
‘ವೈರ’ಕ್ಕೆ ವೈರಿಗಳವರು
‘ಸ್ನೇಹ’ಕ್ಕೆ ಸಾಯುವರು.
ಹಾಗಾಗಿ,
ದ್ವೇಷ-ವೈಶಮ್ಯದಿಂದ ಹೊತ್ತುರಿವ
ದೊಂಬಿ-ಗಲಭೆ, ಹೊಡಿದಾಟ-ಬಡಿದಾಟ,
ಮುಷ್ಕರ-ಪ್ರತಿಭಟನೆ, ಜೈಕಾರ-ದಿಕ್ಕಾರ
ಅವರ ಕಿವಿಯಾಲಿಯನು ತಟ್ಟಿಲ್ಲ.
ಆ ರಾಜ್ಯದಲ್ಲಿರುವ ನನ್ನ ಜನರಿಗೆ
ಕಳ್ಳತನ, ದರೋಡೆ, ಸುಪಾರಿ, ಕೊಲೆ-ಸುಲಿಗೆ,
ಹಿಂಸೆ ಪದಗಳೇನೆಂದೆ ತಿಳಿದಿಲ್ಲ.
ಹಾಗಾಗಿ,
ಅಳುವಿಲ್ಲ, ಅನಾಥರಿಲ್ಲ,
ಅಶಕ್ತರಿಲ್ಲ, ನಿರಾಶ್ರಿತರಿಲ್ಲ,
ದಬ್ಬಾಳಿಕೆ ಇಲ್ಲ, ದೌರ್ಜನ್ಯಗಳಿಲ್ಲ,
ಅಹಿಂಸೆ, ನಿಂದೆ, ಮತ್ಸರಗಳು ಹೇಳ ಹೆಸರಿಗೂ ಇಲ್ಲ.
ಏನು ರಾಜ್ಯ ಅದು !!!!!!!!
ಹೇಗೆ ಬರಬೇಕು ಅಲ್ಲಿ ಭಯೋತ್ಪಾದಕರು
ಭಯದ ಒಂದು ತೃಣವೂ ನುಸುಳಲಾರದಷ್ಟು
ಬಿಗಿಯಾಗಿ ಮನಗಳು ಹೆಣೆದಿರಲು …?
ಇಂತಹ ನಾಡಲ್ಲಿ
ಅಶಾಂತಿ, ನರಮೇಧ, ಗುಂಡಿನ ಸದ್ದು,
ಪೈಶಾಚಿಕ ಘಟನೆ, ಸ್ತ್ರೀ ದೌರ್ಜನ್ಯ,
ಅತ್ಯಾಚಾರ, ಬಲತ್ಕಾರಗಳು ಹೇಗೆ ನಡೆದಾವು ??
ಅಲ್ಲಿ, ನನ್ನ ರಾಜ್ಯದಲ್ಲಿ-
ಗಂಡಿನಷ್ಟೆ ಹೆಣ್ಣಿಗೂ ಮಾನ್ಯತೆ ಇದೆ
ಪರಸ್ಪರ ತಲೆಬಾಗುವ ಸುಸಂಸ್ಕೃತಿ ಇದೆ;
ಅದಕ್ಕಾಗಿ….,
ಅತ್ಯಾಚಾರದ ಉದಾಹರಣೆಗಳಿಲ್ಲ,
ವ್ಯಭಿಚಾರದ ವ್ಯಸನಗಳೂ ಇಲ್ಲ
ಕಾಮುಖರ ಅಟ್ಟಹಾಸವೂ ಇಲ್ಲ.
ಹಾಗೂ,
ಅಲ್ಲಿನ ಹೆಣ್ಣುಮಗಳಿಗೆ
ಶೋಕಿಯ ಸೋಗ,
ತೋರಿಕೆಯ ಬಟ್ಟೆ ತ್ಯಾಗ
ಇಲ್ಲವೇ ಇಲ್ಲ:
ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬ
ಭ್ರಮಾ ಕಲ್ಪನೆ ಅಲ್ಲಿಲ್ಲ;
ಭಾವಗಳು ಕೆರಳುವಂತೆ ಕಾಣಳು
ಭಾವಗಳು ಅರಳುವಂತೆ ಕಾಣುವಳು.
‘ಪ್ರಭು’ ಎಂಬುವವನ ಅವಶ್ಯಕತೆ ಅಲ್ಲಿಲ್ಲ
ಕಟ್ಟುಪಾಡುಗಳ ಸೃಷ್ಠಿಕರ್ತನಿಗೆ ಸ್ಥಳವಿಲ್ಲ;
ಇದು ರಾಜ್ಯ
ಇದೇ ರಾಜ್ಯ
ಇದುವೇ ನನ್ನ ರಾಜ್ಯ.